CONTACT US:      kannadanet.com Karishma Digital studio jawahar road, Koppal-583 231.ಕರಿಷ್ಮಾ ಡಿಜಿಟಲ್ಸ್, ಜವಾಹರ ರಸ್ತೆ, ದುರ್ಗಮ್ಮ ಕಟ್ಟೆ ಹತ್ತಿರ ,ಕೊಪ್ಪಳ Phone: 9880257488 E-mail:   kannadanet@gmail.com,

Home  | Our Team | Gangavati | Kustagi | Yelburga | Feedback | Front page  | Contact us

 

ಕನ್ನಡನೆಟ್.ಕಾಂ

Text Box: ಉತ್ತರ ಕರ್ನಾಟಕ ಮತ್ತು ಕೊಪ್ಪಳ ಜಿಲ್ಲೆಯ ಪ್ರಪ್ರಥಮ ಕನ್ನಡ  ಇ-ಪತ್ರಿಕೆ

ಕವಿಸಮಯ- ಕವಿಗೋಷ್ಠಿ ಕಾರ್ಯಕ್ರಮದ ಕೆಲವು ಕವನಗಳು

ಸಿರಾಜ್ ಬಿಸರಳ್ಳಿ

ಹೆಚ್ಚೆಂದರೆ!

ಹೆಚ್ಚೆಂದರೇ

ಏನು ಮಾಡಬಹುದು?

ಕೈಕಾಲು ಕಟ್ಟಿ

ಬಾಯಿಗೆ ಬಟ್ಟೆ ತುರುಕಿ

ಮನಬಂದಷ್ಟು ಹೊಡೆಯಬಹುದು

ಹೆಚ್ಚೆಂದರೇ,

ನಮ್ಮ ದೇಹದ ಮೇಲೆ

ಚಾಕು ಚೂರಿಗಳು ರಂಗೂಲಿ ಇಡಬಹುದು

ಬೂಟುಗಳು  ನಾಟ್ಯವಾಡಬಹುದು !

ಹೆಚ್ಚೆಂದರೇ,

ಕೊನೆಗೊಂದು ದಿನ

ನಿಮ್ಮ ಬಂದೂಕಿನ ಗುಂಡುಗಳ

ಮೇಲೆ ನಮ್ಮ ಹೆಸರು ಬರೆಯಬಹುದು !

ಆರಿಸಲಾರಿರಿ ನಮ್ಮ ಒಡಲಾಗ್ನಿ

ಬಚ್ಚಿಡಲಾರಿರಿ ನಮ್ಮೊಳಗಿನ ಬೆಂಕಿ   

 

 

========

 

ಎಚ್ಚರ

ನಿಮ್ಮರಮನೆಯ ಬೆಳಕಿಗೆ

ನಮ್ಮನ್ನೇಕೆ ಸುಡುವಿರಿ

ಬೆಂದು ಹೋಗುವದು

ಬೇಯಿಸಿಕೊಳ್ಳುವದು ಸಾಕಾಗಿದೆ ಈಗ;

ದೂರ ಸರಿಯಿರಿ

ಕಿಡಿ ತಾಕೀತು.

 

-*****

ಕ್ಷಮಿಸು ಬಸವ

 

ಹುಸಿಯ ನುಡಿಯಲಾರೆ

ಕ್ಷಮಿಸು ಬಸವ

ನಿನ್ನ ಕ್ರಾಂತಿಯೆಂಬುದು

ಬರಿಯ ಭ್ರಾಂತಿಯಾಗಿದೆ ಇಲ್ಲಿ

 

ಹೆಣ್ಣು ಹೊನ್ನು ಮಣ್ಣುಗಳ ಮಾಯಾ

ಮತ್ತಿನಲಿ ತೇಲುವ

ಮರ್ಕಟಗಳ ಜಾತ್ರೆಯಾಗಿದೆ ಇಲ್ಲಿ

 

ಕ್ಷಮಿಸು

ತ್ರಿಶೂಲಕ್ಕೆ ಭ್ರೂಣವ ಸಿಕ್ಕಿಸಿ

ಧರ್ಮೋನ್ಮಾದದಿಂದ ಮೆರೆಯುವವರ

ಕಂಡು ಅಸಹ್ಯ ಪಡದಿರಲಾರೆ

ಕ್ಷಮಿಸು ಬಸವ

 

ಕ್ಷಮಿಸು,

ಸತ್ಯ ಹೇಳುವವರಿಗೆ

ಕಲ್ಲು ಹೊಡೆಯುವವರ

ಕತ್ತು ಹಿಸುಕುವವರ

ಕಂಡು ಜರಿಯದಿರಲಾರೆ

ಕ್ಷಮಿಸು ಬಸವ

 

ಕ್ಷಮಿಸು ಬಸವ

ಉಳ್ಳವರ ಆಟಕ್ಕೆ

ಪಗಡೆಯಾದ ನಿನ್ನ ಕಂಡು

ವ್ಯಥೆ ಪಡದೆ ಇರಲಾರೆ

 

ಕ್ಷಮಿಸು ಬಸವ

ಹುಸಿಯ ನುಡಿಯಲಾರೆ

 

ವಿಠ್ಠಪ್ಪ ಗೋರಂಟ್ಲಿ

ಬಯಕೆ

ಬಯಲ ತಬ್ಬುವ ಬಯಕೆ

ಸಾಗರಕ್ಕೆ

ನಕ್ಷತ್ರಗಳ ನುಂಗುವ ಚಪಲ

ನಾಗರಕ್ಕೆ

 

ತೆರೆಗಳ ತೆರೆದು ತೂರಿತು

ಸಾಗರ ಮುತ್ತುಗಳ ದಡಕ್ಕೆ

ಗಿಡಗಳ ಟೊಂಗೆ ಕಾವಾಗಿ ಕೊಡಲಿಗೆ

ತುಂಡರಿಸತೊಡಗಿತು ಬುಡಕ್ಕೆ

 

ಸದಾ ಮೃತ್ಯು ಬಾಯ್ತೆರೆದಿದೆ

ಜೀವಸಂಕುಲಕ್ಕೆ

ಬದುಕು ತಬ್ಬಿದ ಜೀವ

ಬೆದಕುತ್ತಿದೆ ಅಮೃತಕಲಶಕ್ಕೆ